ರಾಜ್ಯ

ಬಕ್ರೀದ್ ಹಬ್ಬ ಹಿನ್ನೆಲೆ: ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನಿಷೇಧ

Nagaraja AB

ಬೆಂಗಳೂರು: ತ್ಯಾಗ ಹಾಗೂ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಇದೇ 28 ರಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು, ಪಾದಚಾರಿ ಮಾರ್ಗಗಳು, ಎಲ್ಲಾ ರೀತಿಯ ಆಸ್ಪತ್ರೆ ಆವರಣಗಳು, ನರ್ಸಿಂಗ್ ಹೋಂ ಒಳ ಮತ್ತು ಹೊರ ಆವರಣಗಳು, ಶಾಲೆ ಕಾಲೇಜುಗಳ ಒಳ ಮತ್ತು ಹೊರ ಆವರಣಗಳಲ್ಲಿ, ಆಟದ ಮೈದಾನಗಳಲ್ಲಿ, ಮಸೀದಿಗಳ ಹಾಗೂ ಇತರೆ ಧಾರ್ಮಿಕ ಸ್ಥಳ ಹಾಗೂ ಆವರಣಗಳಲ್ಲಿ, ಉದ್ಯಾನವನಗಳ ಒಳಗೆ ಮತ್ತು ಹೊರಗೆ ಅಥವಾ ಇನ್ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಅನಧೀಕೃತ ಪ್ರಾಣಿವಧೆ  ಮಾಡದಂತೆ ಸುತ್ತೊಲೆ ಹೊರಡಿಸಿದೆ.

ಬಿಬಿಎಂಪಿ ಅಧಿನಿಯಮ 2020ರ ಪ್ರಕಾರ ಅನಧಿಕೃತವಾಗಿ ಪ್ರಾಣಿವಧೆ ನಿರ್ಭಂಧಿಸಲಾಗಿದೆ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸಲಾಗುತ್ತದೆ.  ಕರ್ನಾಟಕ ರಾಜ್ಯ ಪ್ರಾಣಿ ಬಲಿ ತಡೆ ಕಾಯ್ದೆ 1959ರ ಸೆಕ್ಷನ್ 3ರ ಪ್ರಕಾರ ಪ್ರಾಣಿ ಬಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಅಂಥವರಿಗೆ 06 ತಿಂಗಳ ಸಜೆ ಅಥವಾ ದಂಡ ಎರಡೂ ವಿಧಿಸಬಹುದಾಗಿದೆ.  ಸಾರ್ವಜನಿಕರು ಪ್ರಾಣಿವಧೆ ಕಾಯ್ದೆಯ ಪ್ರಕಾರ ವಧೆಗೆ ಅರ್ಹವಾದ ಮತ್ತು ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆಗೆ ಅವಕಾಶವಿರಲಿದೆ. 

ಐಪಿಸಿ ಸೆಕ್ಷನ್ 429ರ ಪ್ರಕಾರ ಯಾವುದೇ ಪ್ರಾಣಿಗಳನ್ನು ಅನಧಿಕೃತವಾಗಿ ಕೊಂದರೆ 05 ವರ್ಷ ಜೈಲು ಶಿಕ್ಷೆಯಾಗಲಿದೆ.  ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರಂತೆ ಜಾನುವಾರ ಹತ್ಯೆ ನಿಷೇಧಿಸಲಾಗಿದೆ. ಸಾಗಾಟ  ಸಹ ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕರಿಂದ ಸಹಕಾರ ಕೋರಲಾಗಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ದೂರು/ಮಾಹಿತಿ ನೀಡಬಹುದಾಗಿದೆ ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಕೆ.ಪಿ. ರವಿಕುಮಾರ್ ತಿಳಿಸಿದ್ದಾರೆ.

SCROLL FOR NEXT