ಬೆಂಗಳೂರು: ದಿನೇಶ್ ಬಾಬು ನಿರ್ದೇಶನದ ಐವತ್ತನೇ ಚಿತ್ರವಾದ ‘ಕಸ್ತೂರಿ ಮಹಲ್’ ಸಿನಿಮಾದಿಂದ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಹೊರ ನಡೆದಿದ್ದಾರೆ.
ಸಮಯದ ಹೊಂದಾಣಿಕೆಯ ಸಮಸ್ಯೆಯಿಂದ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಚಿತ್ರದಿಂದ ಹೊರ ನಡೆದಿದ್ದಾರೆ. ಈಗ ಅವರ ಪಾತ್ರದಲ್ಲಿ ಶಾನ್ವಿ ಶ್ರೀವಾಸ್ತವ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಚಿತ್ರಕ್ಕೆ ‘ಕಸ್ತೂರಿ ನಿವಾಸ’ ಎಂಬ ಟೈಟಲ್ ಇಡಲಾಗಿತ್ತು. ಇದಕ್ಕೆ ವರನಟ ರಾಜ್ಕುಮಾರ್ ಅಭಿಮಾನಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿರುವ ಚಿತ್ರದ ಶೀರ್ಷಿಕೆಯನ್ನು ಮರುಬಳಕೆ ಮಾಡಬಾರದು ಎಂದು ಒತ್ತಾಯಿಸಿದ್ದರು. ಹಾಗಾಗಿ, ಚಿತ್ರತಂಡ ‘ಕಸ್ತೂರಿ ಮಹಲ್’ ಎಂದು ಟೈಟಲ್ ಬದಲಾಯಿಸಿತ್ತು.